ಹನುಮನ ಭಕ್ತರ ಮೇಲೆ ಶನಿ ವಕ್ರ ದೃಷ್ಟಿ ಹರಿಸುವುದಿಲ್ಲ ಯಾಕೆ ಗೊತ್ತೇ? ರಾಮಾಯಣದ ಈ ಎರಡು ಘಟನೆಗಳೇ ಕಾರಣ

ಹನುಮನ ಭಕ್ತರ ಮೇಲೆ ಶನಿ ವಕ್ರ ದೃಷ್ಟಿ ಹರಿಸುವುದಿಲ್ಲ ಯಾಕೆ ಗೊತ್ತೇ? ರಾಮಾಯಣದ ಈ ಎರಡು ಘಟನೆಗಳೇ ಕಾರಣ

ನಮಸ್ಕಾರ ಸ್ನೇಹಿತರೇ, ನೀವು ಹನುಮಾನ್ ಭಕ್ತರಿಗೆ ಶನಿ ದೇವರ ಕಾಟ ಇರುವುದಿಲ್ಲ ಎಂದು ಹಲವಾರು ಕಡೆ ಕೇಳಿರುತ್ತೀರಿ ಅಥವಾ ಓದಿರುತ್ತೀರಿ. ಆದರೆ ಯಾಕೆ ಹೀಗೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿದೆಯೇ? ಹಾಗಿದ್ದರೇ ಬನ್ನಿ ರಾಮಾಯಣದಲ್ಲಿ ಈ ಎರಡು ಘಟನೆಗಳ ಮೂಲಕ ಯಾವ ಕಾರಣಕ್ಕೆ ಶನಿ ದೇವನು ಹನುಮಾನ್ ಭಕ್ತರಿಗೆ ವಕ್ರ ದೃಷ್ಟಿಯನ್ನು ಬೀರುವುದಿಲ್ಲ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಮೊದಲನೆಯದಾಗಿ, ರಾವಣ ತನ್ನ ಅಪಾರವಾದ ಭಕ್ತಿಯಿಂದ ವರಗಳನ್ನು ಪಡೆದು, ದೇವತೆಗಳನ್ನು ಸೋಲಿಸಿ ನವಗ್ರಹಗಳನ್ನು ಅಧೀನದಲ್ಲಿ ಇಟ್ಟುಕೊಂಡಿದ್ದನು. ರಾವಣನು ಒಬ್ಬ ಮಹಾ ಜ್ಯೋತಿಷಿಯಾಗಿದ್ದನು. ರಾವಣನ ಹಿರಿಮಗ ಇಂದ್ರಜಿತ್/ಮೇಘನಾದ್ ಜನಿಸಿದ ಗಳಿಗೆಯಲ್ಲಿ ಎಲ್ಲಾ ಗ್ರಹಗಳನ್ನು ಬಲವಂತವಾಗಿ ಅತ್ಯಂತ ಅನುಕೂಲಕರ ಜ್ಯೋತಿಷ್ಯ ಸ್ಥಾನದಲ್ಲಿ ಇರಿಸುವ ಮೂಲಕ ಇಂದ್ರಜಿತ್ ನನ್ನ ಅಜೇಯನನ್ನಾಗಿ ಮಾಡಬೇಕು ಎಂದುಕೊಂಡನು. ಆದ್ದರಿಂದ ಅವರು ಎಲ್ಲಾ ಗ್ರಹಗಳನ್ನು ಅನುಕೂಲಕರ ಸ್ಥಾನಕ್ಕೆ (11 ಮನೆಗೆ) ಚಲಿಸುವಂತೆ ಆದೇಶ ನೀಡಿದನು.

ಆದರೆ ಶನಿ ದೇವನು ರಾವಣನ ಮಾತನ್ನು ಕೇಳಲು ಸಿದ್ಧವಿರಲಿಲ್ಲ, ರಾವಣನ ಹಿಡಿತದಿಂದ ಕೊಂಚ ತಪ್ಪಿಸಿಕೊಂಡು 12 ಸ್ಥಾನಕ್ಕೆ ಸ್ವಲ್ಪ ಕಾಲು ಚಾಚಲು ಪ್ರಯತ್ನ ಪಟ್ಟನು, ಇದರಿಂದ ರಾವಣನ ಮಗ ಇಂದ್ರಜಿತ್ ಅಜೇಯನಾಗುವುದಿಲ್ಲ, ಹಾಗೂ ಇದು ಆತನ ಅಂತ್ಯಕ್ಕೆ ಕಾರಣವಾಗುತ್ತದೆ ಎಂದುದನ್ನು ಅರಿತ ರಾವಣನು ಕೂಡಲೇ ತನ್ನ ಪಾದಗಳನ್ನು ಬಿಗಿಗೊಳಿಸಿದನು. (ನವಗ್ರಹಗಳನ್ನು ತನ್ನ ಪಾದದ ಅಡಿಯಲ್ಲಿ ಇಟ್ಟುಕೊಂಡಿದ್ದನು ರಾವಣ.) ಇದು ಎಲ್ಲಾ ದೇವತೆಗಳ ಕಳವಳಕ್ಕೆ ಕಾರಣವಾಗಿತ್ತು.

ದೇವತೆಗಳು ಏನು ಮಾಡುವುದು ಎಂದು ತಿಳಿಯದೇ ನಾರದ ಮುನಿಯವರ ಸಹಾಯ ಕೇಳಿದರು. ಕೂಡಲೇ ರಾವಣನ ಅರಮನೆ ತಲುಪಿದ ನಾರದ ಮುನಿಗಳು, ಗ್ರಹಗಳು ರಾವಣನ ಪಾದದ ಕೆಳಗಡೆ ಇರುವುದನ್ನು ಗಮನಿಸಿದರು. ಇದನ್ನು ಕಂಡ ಕೂಡಲೇ ರಾವಣನ್ನು ಹೊಗಳಲು ಆರಂಭಿಸಿದರು. ಗ್ರಹಗಳ ಅಧಿಪತಿ, ನಿಮ್ಮ ಜಯವನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂದು ಹೊಗಳುತ್ತಾ ಹೊಸ ದಾಳವನ್ನು ಉರುಳಿಸಿದರು. ನೀವ್ಯಾಕೆ ಗ್ರಹಗಳ ಬೆನ್ನಮೇಲೆ ಹಾಕುತ್ತಿರುವ ನಿಮ್ಮ ವಿಜಯದ ಸಂಕೇತವನ್ನು ಗ್ರಹಗಳ ಎದೆ ಮೇಲೆ ಅಚ್ಚು ಹಾಕಬಾರದು ಎಂದು ರಾವಣನ್ನು ವಿಜಯದ ಸಂಕೇತವನ್ನು ಗ್ರಹಗಳ ಮೇಲೆ ಅಚ್ಚೆ ಹಾಕುವಂತೆ ಉರಿದುಂಬಿಸಿದರು.

ಇದನ್ನು ಕೇಳಿದ ರಾವಣನು ಸರಿ ಎಂದು ಆಲೋಚನೆ ಮಾಡಿ, ಪಾದಗಳ ಕೆಳಗಡೆ ಇರುವ ಗ್ರಹಗಳನ್ನು ತನ್ನ ಕಡೆ ಮುಖ ಮಾಡುವಂತೆ ಆದೇಶಿಸಿದನು. ಇದರಿಂದ ಶನಿ ದೇವನು ರಾವಣನ ಮುಖವನ್ನು ನೋಡಲು ಸಾಧ್ಯವಾಯಿತು. ಕೂಡಲೇ ಶನಿ ದೇವನು ರಾವಣನ ಮೇಲೆ ವಕ್ರ ದೃಷ್ಟಿಯನ್ನು ಹರಿಸಿದನು. ಇದರಿಂದ ತನಗೆ ಕಷ್ಟಗಳು ಆರಂಭವಾಗುತ್ತವೆ ಎಂಬುದನ್ನು ಅರಿತ ರಾವಣನು, ಶನಿ ದೇವನನ್ನು ಚಿಕ್ಕ ಸೀಸೆಯಲ್ಲಿ ಬಂಧಿಸಿದನು. ಶನಿ ದೇವನಿಗೆ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಹಲವಾರು ವರ್ಷಗಳ ನಂತರ ಸೀತೆಯನ್ನು ಹುಡುಕಿಕೊಂಡು ಹನುಮಂತನು ಲಂಕೆಯನ್ನು ತಲುಪಿ, ಭೇಟಿಯಾಗಿ, ಲಂಕಾ ದಹನ ಮಾಡಿದ ನಂತರ ಹಿಂತಿರುಗುವಾಗ ಒಂದು ಅಶರೀರ ವಾಣಿ ಕೇಳುಬರುತ್ತದೆ. ಹನುಮಂತನು ಏನು ಎಂದು ನೋಡಲು ಹೋಗಿ, ಬಂಧನದಲ್ಲಿದ್ದ ಶನಿ ದೇವನನ್ನು ಕಂಡನು ಹಾಗೂ ಶನಿ ದೇವರ ಮನವಿಯ ಮೇರೆಗೆ ಬಂಧನದಿಂದ ಮುಕ್ತಗೊಳಿಸಿದನು. ಅದೇ ಸಮಯದಲ್ಲಿ ಮಾತನಾಡಿದ ಶನಿ ದೇವನು, ನೀನು ನನ್ನನ್ನು ಬಂಧನದಿಂದ ಮುಕ್ತಿಗೊಳಿಸಿದ್ದೀಯಾ, ನಿನಗಾಗಿ ವರವನ್ನು ನೀಡಲು ಬಯಸಿದ್ದೇನೆ ಎಂದಾಗ ಹನುಮಂತನು, ನಿನ್ನ ವಕ್ರ ದೃಷ್ಟಿಯನ್ನು ನನ್ನ ಭಕ್ತರ ಮೇಲೆ ಹರಿಸಬೇಡ ಎಂದನು. ಅದೇ ಕಾರಣಕ್ಕೆ ಅಂದಿನಿಂದ ಹನುಮಂತನ ಭಕ್ತರ ಮೇಲೆ ಶನಿ ದೇವನ ವಕ್ರ ದೃಷ್ಟಿ ಪರಿಣಾಮ ಬೀರುವುದಿಲ್ಲ ಹಾಗೂ ಯಾವುದೇ ತೊಂದರೆಗಳನ್ನು ಮಾಡುವುದಿಲ್ಲ.

ಇನ್ನು ಎರಡನೇ ಘಟನೆಯಲ್ಲಿ ರಾಮ ಸೇತು ನಿರ್ಮಾಣದ ವೇಳೆಯಲ್ಲಿ ಸೇತುವೆಯನ್ನು ರಕ್ಷಿಸುವಂತೆ ಹನುಮನಿಗೆ ಪ್ರಭು ಶ್ರೀ ರಾಮ ಆದೇಶ ನೀಡುತ್ತಾರೆ. ಅದೇ ಸಮಯದಲ್ಲಿ, ಮರದ ಕೆಳಗಡೆ ಕುಳಿತು ಹನುಮಂತನು ರಾಮ ಜಪ ಮಾಡುತ್ತಿರುತ್ತಾನೆ. ಅಲ್ಲಿಗೆ ಆಗಮಿಸಿದ ಶನಿ ದೇವನು ನಾನು ನಿಮ್ಮ ಮೇಲೆ ನನ್ನ ದೃಷ್ಟಿಯನ್ನು ಹರಿಸಲು ಬಯಸುತ್ತೇನೆ, ಇದರಿಂದ ಯಾವುದೇ ತೊಂದರೆ ಯಾಗುವುದಿಲ್ಲ. ಇದು ಪ್ರತಿಯೊಬ್ಬರ ಮೇಲೆ ನಾನು ಹರಿಸಲೇ ಬೇಕಾಗುತ್ತದೆ ಎಂದರು. ಇದಕ್ಕೆ ಪ್ರತಿಕ್ರಯಿಸಿದ ಹನುಮಂತನು, ನಾನು ಪ್ರಕೃತಿ ನಿಯಮಗಳನ್ನು ಪಾಲಿಸುತ್ತೇನೆ ಖಂಡಿತ ಮುಂದೊಂದು ದಿನ ನೀವು ನನ್ನ ಮೇಲೆ ದೃಷ್ಟಿ ಹರಿಸಿ, ಯಾಕೆಂದರೆ ಇದೀಗ ನಾನು ರಾಮ ಸೇವೆಯಲ್ಲಿ ಇದ್ದೇನೆ, ಈಗ ಬೇಡ ಎಂದರು. ಇದರಿಂದ ಕೋಪಗೊಂಡ ಶನಿ ದೇವನು ತನ್ನ ಜೊತೆ ಯುದ್ಧ ಮಾಡುವಂತೆ ಹನುಮಂತನನ್ನು ಕಿಚಾಯಿಸುತ್ತಾನೆ, ತಾನೇ ಬಲಿಷ್ಠ ಎಂದು ಹೇಳುತ್ತಾನೆ. ಹನುಮಂತನು ಯಾವುದೇ ಆಸಕ್ತಿಯನ್ನು ತೋರದೇ, ವಿನಾರ್ಮವಾಗಿ ನಿರಾಕರಿಸಿದಾಗ ಶನಿ ದೇವನು ಮತ್ತಷ್ಟು ಕಿಚಾಯಿಸಲು ಆರಂಭಿಸುತ್ತಾನೆ.

ರಾಮ ಜಪಕ್ಕೆ ತೊಂದರೆಯಾದಾಗ ಕೆರಳಿದ ಹನುಮಂತನು ತನ್ನ ಬಾಲದಿಂದ ಶನಿ ದೇವನನ್ನು ಬಂಧಿಸುತ್ತಾನೆ. ಇಷ್ಟಾದರೂ ಸುಮ್ಮನಾಗದ ಶನಿ ದೇವನು ಬಂಧನದಿಂದ ಮುಕ್ತಿಗೊಳಿಸುವ ತನ್ನ ಎಲ್ಲಾ ಪ್ರಯತ್ನಗಳು ವಿಫಲವಾದಾಗ, ಮತ್ತೊಮ್ಮೆ ತೊಂದರೆ ಕೊಡಲು ಆರಂಭಿಸುತ್ತಾನೆ. ಇದರಿಂದ ಹನುಮಂತನು ಹಾಗೂ ಶನಿ ದೇವನ ದೊಡ್ಡ ಯುದ್ಧವೇ ನಡೆಯುತ್ತದೆ. ಕೂಡಲೇ ಶನಿ ದೇವನು ಕ್ಷಮೆ ಕೇಳಿ ತನ್ನನ್ನು ಬಿಟ್ಟು ಬಿಡುವಂತೆ ಮನವಿ ಮಾಡುತ್ತಾನೆ. ಇದಕ್ಕೆ ಪ್ರತಿಯಾಗಿ ನಿನ್ನ ಭಕ್ತರಿಗೆ ನನ್ನ ವಕ್ರ ದೃಷ್ಟಿ ಬೀರಿ, ತೊಂದರೆ ಉಂಟು ಮಾಡುವುದಿಲ್ಲ ಎಂದು ವರ ನೀಡುತ್ತಾನೆ ಎನ್ನಲಾಗಿದೆ. ಅದೇ ಕಾರಣಕ್ಕೆ ಹನುಮಂತನ ಭಕ್ತರಿಗೆ ಎಂದಿಗೂ ಶನಿಯ ವಕ್ರ ದೃಷ್ಟಿಯ ಪರಿಣಾಮ ಇರುವುದಿಲ್ಲ ಎಂದು ನಂಬಲಾಗುತ್ತದೆ.