ಬ್ರೇಕಿಂಗ್ ನ್ಯೂಸ್: ಜಯನಗರ ಕ್ಷೇತ್ರದಲ್ಲಿ ಚುನಾವಣೆ ಮುಂದೂಡಿಕೆ

ಬ್ರೇಕಿಂಗ್ ನ್ಯೂಸ್: ಜಯನಗರ ಕ್ಷೇತ್ರದಲ್ಲಿ ಚುನಾವಣೆ ಮುಂದೂಡಿಕೆ

0

ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ನಿಧನದ ಹಿನ್ನೆಲೆಯಲ್ಲಿ ಜಯನಗರ ಕ್ಷೇತ್ರದಲ್ಲಿ ಚುನಾವಣೆ ಮುಂದೂಡಿ, ಚುನಾವಣಾ ಪ್ರಕ್ರಿಯೆಯನ್ನು ಹೊಸದಾಗಿ ನಡೆಸಬೇಕಾಗುತ್ತದೆ.

ಬಿಜೆಪಿಗೆ ಮಾತ್ರ ಹೊಸ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಸಲು ಅವಕಾಶ ಇರುತ್ತದೆ. ಉಳಿದ ಪಕ್ಷಗಳ ಅಭ್ಯರ್ಥಿಗಳಲ್ಲಿ ಬದಲಾವಣೆಯಾಗುವುದಿಲ್ಲ.

ವಿಜಯ್ ಕುಮಾರ್ ನಿಧನರಾದ ಹಿನ್ನೆಲೆಯಲ್ಲಿ ಹೊಸ ಅಭ್ಯರ್ಥಿಯನ್ನು ಬಿಜೆಪಿ ಹುಡುಕಬೇಕಿದೆ. ವಿಜಯ್ ಕುಮಾರ್ ಅವರು ಈ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದರು.

ಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೌಮ್ಯಾರೆಡ್ಡಿ (ಗೃಹ ಸಚಿವ ರಾಮಲಿಂಗಾರೆಡ್ಡಿ ಪುತ್ರಿ), ‘ಲಂಚ ಮುಕ್ತ ಕರ್ನಾಟಕ’ ವೇದಿಕೆಯ ರವಿಕೃಷ್ಣರೆಡ್ಡಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

‘ಕೇಂದ್ರ ಚುನಾವಣಾ ಆಯೋಗಕ್ಕೆ ‌ವರದಿ ಸಲ್ಲಿಕೆಯಾದ ಬಳಿಕ ಮತದಾನದ ದಿನಾಂಕ ಮರು ನಿಗದಿಯಾಗಲಿದೆ. ನಾಮಪತ್ರ ಸಲ್ಲಿಕೆ, ಪರಿಶೀಲನೆಗೆ ಸಮಯ ನಿಗದಿ ಮಾಡಿ ಪ್ರಚಾರಕ್ಕೆ15 ದಿನ ಸಮಯ ಸಿಗುವಂತೆ ಅವಕಾಶ ಕಲ್ಪಿಸಿ ಮತದಾನ ದಿನಾಂಕ ನಿಗದಿ ಮಾಡಲಾಗುತ್ತದೆ’ ಎಂದು ಆಯೋಗದ ಮೂಲಗಳು ತಿಳಿಸಿವೆ.

ಪಕ್ಷಗಳಿಂದ ಬಿ ಫಾರಂ ಪಡೆದು ನಾಮಪತ್ರ ಸಲ್ಲಿಸಿದ್ದವರು ನಿಧನರಾದರೆ ಚುನಾವಣೆ ಮುಂದೂಡಲಾಗುವುದು. ಚುನಾವಣಾ ಪ್ರಕ್ರಿಯೆಯನ್ನು ಮತ್ತೊಮ್ಮೆ ಆರಂಭಿಸಬೇಕು ಎಂದು ಜನಪ್ರತಿನಿಧಿ ಕಾಯ್ದೆ ಹೇಳುತ್ತದೆ.

2013ರಲ್ಲಿ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೊಣ್ಣೇಗೌಡ ನಿಧನರಾಗಿದ್ದರು. ಹಾಗಾಗಿ‌ ಅಲ್ಲಿ ಹೊಸದಾಗಿ ಮತದಾನಕ್ಕೆ ಮರುದಿನಾಂಕ ನಿಗದಿ‌ಮಾಡಲಾಗಿತ್ತು.

ಕೃಪೆ: ಪ್ರಜಾವಾಣಿ