ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ಇದೀಗ ದೆಹಲಿಯಲ್ಲೂ ಸಂಚಾರ, ನಮ್ಮ ರಾಜ್ಯ ನಮ್ಮ ಹೆಮ್ಮೆ. ಹೇಗಿರಲಿದೆ ಗೊತ್ತೇ??

ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ಇದೀಗ ದೆಹಲಿಯಲ್ಲೂ ಸಂಚಾರ, ನಮ್ಮ ರಾಜ್ಯ ನಮ್ಮ ಹೆಮ್ಮೆ. ಹೇಗಿರಲಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಪ್ರತಿವರ್ಷ ಜನವರು 26ರಂದು ಅಂದರೆ ಗಣರಾಜ್ಯೋತ್ಸವದಂದು, ಸ್ತಬ್ದ ಚಿತ್ರಗಳ ಪ್ರದರ್ಶನವನ್ನು ದೆಹಲಿಯಲ್ಲಿ ನಡೆಸಲಾಗುತ್ತದೆ. ದೇಶದ ವಿವಿಧ ರಾಜ್ಯಗಳಿಂದ ಬೇರೆ ಬೇರೆ ವಿಷಯವಸ್ತುಗಳನ್ನಿಟ್ಟುಕೊಂಡು, ಅವರವರ ಪರಂಪರೆಯನ್ನು ತೋರಿಸುವಂಥ ಚಲಿಸುವ ಸ್ತಬ್ದ ಚಿತ್ರಗಳನ್ನು ಮೆರವಣಿಗೆ ರೂಪದಲ್ಲಿ ತರಲಾಗುತ್ತದೆ. ಅದರಲ್ಲಿ ಉತ್ತಮವಾದದ್ದನ್ನು ಆಯ್ಕೆ ಮಾಡಿ ಪ್ರಶಸ್ತಿಯನ್ನೂ ಕೂಡ ಕೊಡಲಾಗುತ್ತದೆ. ಇದರಲ್ಲಿ ನಮ್ಮ ರಾಜ್ಯವೂ ಹೊರತಲ್ಲ. ಈ ಬಾರಿ ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ಎಂಬ ವಿಷಯಾಧಾರಿತ ರಾಜ್ಯದ ಸ್ತಬ್ಧ ಚಿತ್ರ ಈ ಬಾರಿಯ ಪ್ರಮುಖ ಆಕರ್ಷಣೆಯಾಗಲಿದೆ.

ಈ ಬಾರಿ ಆಯ್ಕೆಯಾದ 12 ರಾಜ್ಯಗಳ ಸ್ತಬ್ಧ ಚಿತ್ರಗಳಲ್ಲಿ ದಕ್ಷಿಣ ಭಾರತದಿಂದ ಆಯ್ಕೆಯಾಗಿರುವ ಏಕೈಕ ಸ್ತಬ್ಧ ಚಿತ್ರ ಎಂದರೆ ಅದು ನಮ್ಮ ರಾಜ್ಯದ್ದು, ನಮ್ಮ ಕರ್ನಾಟಕದ್ದು ಎನ್ನುವುದೇ ನಮ್ಮ ಹೆಮ್ಮೆ. ಅಷ್ಟೇಅಲ್ಲ, ಸತತವಾಗಿ ಹದಿಮೂರನೇ ಬಾರಿಗೆ ನಮ್ಮ ರಾಜ್ಯದ ಸ್ತಬ್ದ ಚಿತ್ರ ಪ್ರದರ್ಶನಕ್ಕೆ ಆಯ್ಕೆಯಾಗ್ರುವುದು ನಿಜಕ್ಕೂ ಶ್ಲಾಘನೀಯ. ಇನ್ನು ಈ ಸ್ತಬ್ದ ಚಿತ್ರದ ತೊಟ್ಟಿಲಿನಲ್ಲಿ ಏನೆಲ್ಲಾ ಇರಬಹುದು ಎಂದರೆ, ಕುಶಲಕಲೆಗಳಾದ ಕೈಯಿಂದ ತಯಾರಿಸಿದ ಮಡಿಕೆ, ಸೂಕ್ಷ್ಮವಾಗಿ ಕೆತ್ತನೆ ಮಾಡಿದ ಶ್ರೀಗಂಧದ ವಸ್ತುಗಳು, ಕೈಮಗ್ಗದ ಸೀರೆಗಳು ಮೊದಲಾದ 16ಕ್ಕೂ ಹೆಚ್ಚು ಕರಕುಶಲ ವಸ್ತುಗಳು ಭೌಗೋಳಿಕ ಸೂಚಿ ಸಂಕೇತದ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು, ಇದನ್ನು ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ಎಂದು ಕರೆಯುತ್ತಾರೆ. ಚೆನ್ನಪಟ್ಟಣ ಮತ್ತು ಕಿನ್ನಾಳ ಮರದ ಕೆತ್ತನೆ ವಸ್ತುಗಳು, ಪ್ರತಿಮೆಗಳು, ಬಿದರಿಯ ಕಲಾಕೃತಿಗಳು ನಮ್ಮ ರಾಜ್ಯದ ಪ್ರಮುಖ ಆಕರ್ಷಣೆಯಾಗಿದೆ.

ಇನ್ನು ಕರ್ನಾಟಕದ ಸ್ತಬ್ದ ಚಿತ್ರದ ಆರಂಭದಲ್ಲಿ ಮೈಸೂರಿನ ಬೀಟೆ ಮರ ಹಾಗೂ ದಂತದ ಕಸೂತಿ ಕೆತ್ತನೆಯ ದೊಡ್ದ ಆನೆಯ ಕಲಾಕೃತಿ, ಈ ಕಲಾಕೃತಿಯ ಕೆಳಗಿನ ಭಾಗದಲ್ಲಿ ಯಕ್ಷಗಾನ ಬೊಂಬೆಯಾಟದ ಚಿತ್ರಣ. ಗಂಜೀಫಾ ಕಲಾಕೃತಿಗಳನ್ನೂ ಇಲ್ಲಿ ಕಾಣಬಹುದು. ಸ್ತಬ್ಧ ಚಿತ್ರದ ಮಧ್ಯದಲ್ಲಿ ಬಿದರಿ ಕಲೆಯಲ್ಲಿ ರೂಪಿಸಿರುವ ದೊಡ್ಡ ಪ್ರಮಾಣದ ಹೂಜಿ. ಹೂಜಿಯ ಇಕ್ಕೆಲೆಗಳಲ್ಲಿ ಕರಾವಳಿಯ ವೈಶಿಷ್ಟ್ಯವನ್ನು ಬಿಂಬಿಸುವ ಭೂತಾರಾಧನೆಯ ಮುಖವಾಡದ ಕಲಾಕೃತಿಗಳಿವೆ. ಹೂಜಿಯ ಹಿಂಬದಿಯಲ್ಲಿ ಬಿದರಿ ಕಲೆ ಬಳಸಿ ಸಿದ್ಧಪಡಿಸಿರುವ ನವಿಲುಗಳು ಹಾಗೂ ಹಿಂಬಂದಿಯಲ್ಲಿ ಆಂಜನೇಯ ಸ್ವಾಮಿಯ ಮೂರ್ತಿ ಕಾಣಬಹುದು. ಇದರ ಅಕ್ಕ-ಪಕ್ಕದಲ್ಲಿ ಚೆನ್ನಪಟ್ಟಣದ ಬೊಂಬೆಗಳು, ಮೆರುಗೆಣ್ಣೆಯ ಆಟಿಕೆಗಳು, ನವಲಗುಂದ ಧರಿ ಶ್ರೀಗಂಧ ಮರದ ಕೆತ್ತನೆ. ಒಟ್ಟಿನಲ್ಲಿ ಕರ್ನಾಟಕವನ್ನು ಪ್ರತಿಬಿಂಬಿಸುವ ಅದ್ಭುತ ಪಾರಂಪರಿಕ ತೊಟ್ತಿಲು ಈ ಬಾರಿ ದೆಹಲಿಯಲ್ಲಿ ಪ್ರಮುಖ ಆಕರ್ಷಣೆ ಎನಿಸುವುದರಲ್ಲಿ ಎರಡು ಮಾತಿಲ್ಲ.