ತಾಯಿಯನ್ನು ನಿದ್ದೆಯಿಂದ ಎಚ್ಚರಗೊಳಿಸಬಾರದು ಎಂದು ಕಲಿತ ಬಾಲ್ ಗಳು, ಟಾಪ್ ಬೌಲರ್ನನ್ನಾಗಿ ಮಾಡಿತು! ಹೇಗಿದೆ ಗೊತ್ತಾ ಬುಮ್ರಾರವರ ಅಸಲಿ ಜೀವನ ಕಥೆ

ತಾಯಿಯನ್ನು ನಿದ್ದೆಯಿಂದ ಎಚ್ಚರಗೊಳಿಸಬಾರದು ಎಂದು ಕಲಿತ ಬಾಲ್ ಗಳು, ಟಾಪ್ ಬೌಲರ್ನನ್ನಾಗಿ ಮಾಡಿತು! ಹೇಗಿದೆ ಗೊತ್ತಾ ಬುಮ್ರಾರವರ ಅಸಲಿ ಜೀವನ ಕಥೆ

ನಮಸ್ಕಾರ ಸ್ನೇಹಿತರೇ, ಜಸ್ಪಿತ್ ಬುಮ್ರಾ ಎಂದ ತಕ್ಷಣ ಕ್ರಿಕೆಟ್ ಅಭಿಮಾನಿಗಳು ಸೇರಿದಂತೆ ದಿಗ್ಗಜರು ಕೂಡ ಈತ ತಂಡದಲ್ಲಿ ಇರಲೇಬೇಕು, ಅತ್ಯುತ್ತಮವಾಗಿ ಯಾರ್ಕರ್ ಹಾಕುತ್ತಾನೆ ಎಂದೆಲ್ಲಾ ಹೇಳುತ್ತಾರೆ. ಇವರು ಅಂತಾರಾಷ್ಟ್ರೀಯ ಪಂದ್ಯಗಳಿಗೆ ಪಾದಾರ್ಪಣೆ ಮಾಡಿದ ಕೆಲವೇ ಕೆಲವು ವರ್ಷಗಳಲ್ಲಿ ವಿಶ್ವದ ಟಾಪ್ ಬೌಲರ್ ಗಳ ಸಾಲಿನಲ್ಲಿ ಕಂಡು ಬರುವಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದಾರೆ.

ಇಂತಹ ಅಪ್ರತಿಮ ಆಟಗಾರನ ಜೀವನ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡುವ ಮುನ್ನ ಹೇಗಿತ್ತು, ಅದರಲ್ಲಿಯೂ ತನ್ನ ತಾಯಿ ನಿದ್ದೆ ಮಾಡುತ್ತಿದ್ದಾಗ ಅವರನ್ನು ಎಚ್ಚರಗೊಳಿಸಬಾರದು ಎಂದು ಕಲಿತ ಕಲೆ ಇಂದು ಈತನನ್ನು ವಿಶ್ವದ ಟಾಪ್ ಬೌಲರ್ನನ್ನಾಗಿ ಹೇಗೆ ಮಾಡಿತು ಎಂಬುದರ ಬಗ್ಗೆ ತಿಳಿದು ಕೊಳ್ಳೋಣ.

ಜಸ್ಪ್ರೀತ್ ಬುಮ್ರಾ ರವರು ಹುಟ್ಟಿನಿಂದಲೇ ಶ್ರೀಮಂತರಲ್ಲ, ಸಾಮಾನ್ಯ ಮಧ್ಯಮ ವರ್ಗದ ಕುಟುಂಬದವರಾಗಿದ್ದರು. ಚಿಕ್ಕ ವಯಸ್ಸಿನಿಂದಲೇ ತಮ್ಮ ಜೀವನದಲ್ಲಿ ಹಲವಾರು ಏರಿಳಿತಗಳನ್ನು ಕಂಡರು, ಬುಮ್ರಾ ರವರು ಕೇವಲ 7 ವರ್ಷವಿದ್ದಾಗ ಅವರ ತಂದೆ ಜಸ್ಬೀರ್ ಸಿಂಗ್ ರವರು ಇಹಲೋಕ ತ್ಯಜಿಸಿದರು. ಸಂಪೂರ್ಣ ಕುಟುಂಬದ ಜವಾಬ್ದಾರಿಯನ್ನು ತಾಯಿ ದಲ್ಜೀತ್ ರವರು ವಹಿಸಿಕೊಂಡು ಬುಮ್ರಾ ಹಾಗೂ ಸಹೋದರಿ ಜುಹಿಕಾ ರವರನ್ನು ಬೆಳೆಸಿದರು.

ಬಾಲ್ಯದಲ್ಲಿ ಕ್ರಿಕೆಟ್ ಆಟಗಾರನಾಗಬೇಕು ಎಂಬ ಆಲೋಚನೆ ಇಲ್ಲದೇ, ಸಾಮಾನ್ಯರಂತೆ ಕ್ರಿಕೆಟ್ ಆಟವಾಡುತ್ತಿದ್ದರು. ಅದೇ ಸಮಯದಲ್ಲಿ ಜಸ್ಪಿತ್ ಬುಮ್ರಾ ರವರನ್ನು ಬಿಸಿಲು ಹೆಚ್ಚಿರುವ ಕಾರಣ ಹೊರಗಡೆ ಹೋಗಲು ತಾಯಿ ಹಾಗೂ ಸಹೋದರಿ ಬಿಡುತ್ತಿರಲಿಲ್ಲ. ಇದರಿಂದ ಬುಮ್ರಾ ರವರು ಮನೆಯಲ್ಲಿಯೇ ಬಾಲ್ ತೆಗೆದುಕೊಂಡು ಗೋಡೆಗೆ ಎಸೆದು ಕಾಲ ಕಳೆಯುತ್ತಿದ್ದರು. ಒಬ್ಬರೇ ಇರುತ್ತಿದ್ದ ಕಾರಣ ಗೋಡೆಗೆ ಬೌಲಿಂಗ್ ಮಾಡಲು ಆರಂಭಿಸಿದರು.

ಆದರೆ ಬುಮ್ರಾ ರವರ ತಾಯಿ ಮಧ್ಯಾಹ್ನದ ಸಮಯದಲ್ಲಿ ಕೆಲಸಕ್ಕೆ ತೆರಳಿ ಬಂದು ಸುಸ್ತಾಗಿ ಮಲಗುತ್ತಿದ್ದರು. ಬಾಲ್ ಗೋಡೆಗೆ ಎಸೆಯುತ್ತಿದ್ದ ಶಬ್ದದಿಂದ ನಿದ್ದೆ ಮಾಡಲು ಕಷ್ಟವಾಗುತ್ತಿದೆ ನಿಲ್ಲಿಸು ಆಟವಾಡಬೇಡ, ಒಂದು ವೇಳೆ ನೀನು ಮನೆಯಲ್ಲಿಯೇ ಆಟವಾಡಬೇಕು ಎಂದರೇ ಶಬ್ದ ಮಾಡದೇ ಆಟವಾಡಿಕೋ ಎಂದರು. ಇದೇ ಘಟನೆ ಅವರ ಜೀವನವನ್ನು ಬದಲಾಯಿಸಿತು.

ಹೌದು, ಅಮ್ಮನಿಗೆ ನಿದ್ರೆಗೆ ಭಂಗ ತರಬಾರದು ಎಂದು ಆಲೋಚನೆ ಮಾಡಿ, ಬುಮ್ರಾ ರವರು ಸರಿಯಾಗಿ ಗೋಡೆ ಹಾಗೂ ನೆಲ ಸೇರುವ ಜಾಗದಲ್ಲಿ ಬಾಲ್ ಎಸೆದರೇ ಶಬ್ದ ಮಾಡದೇ ಇರುವುದನ್ನು ಕಂಡು ಕೊಂಡರು, ಇದರಿಂದ ಮನೆಯಲ್ಲಿಯೇ ಬೌಲಿಂಗ್ ಮಾಡಬಹುದು ಎಂದು ಸರಿಯಾಗಿ ಗೋಡೆ ಮತ್ತು ನೆಲ ಸೇರುವ ಜಾಗಕ್ಕೆ ಬೌಲಿಂಗ್ ಮಾಡುವುದನ್ನು ಅಭ್ಯಾಸ ಮಾಡಿದರು. ಈ ರೀತಿಯ ಅಭ್ಯಾಸದ ಫಲಿತಾಂಶವೇ ಅವರ ಅತ್ಯದ್ಭುತ ಯಾರ್ಕರ್ ಗಳು, ಇದನ್ನು ಅವರೇ ಹೇಳಿದ್ದಾರೆ.

ಈ ರೀತಿ ಮನೆಯಲ್ಲಿ ಕಾಲ ಕಳೆಯಲು ಬೌಲಿಂಗ್ ಮಾಡಿದ ಬಳಿಕ 14 ವರ್ಷವಾಗಿದ್ದಾಗ ಅಮ್ಮನ ಬಳಿ ತೆರಳಿ ನಾನು ಕ್ರಿಕೆಟರ್ ಆಗುತ್ತೇನೆ ಎಂದರು. ಆಗ ಅದು ಸುಲಭದ ಕೆಲಸವಲ್ಲ ಎಂದು ಮೊದಲಿಗೆ ಬೇಡ ಎಂದು ತಾಯಿ ನಿರಾಕರಿಸಿದರು. ಆದರೆ ನನ್ನ ಮೇಲೆ ನಂಬಿಕೆಯಿಡಿ ಎಂದು ತಾಯಿಯನ್ನು ಒಪ್ಪಿಸಿದ ಬುಮ್ರಾ ರವರು, ಪೂರ್ಣಾವಧಿ ಕ್ರಿಕೆಟ್ ತರಬೇತಿ ಆರಂಭಿಸಿದರು. ಕೆಲವು ದಿನಗಳ ಬಳಿಕ ಗುಜರಾತ್ ನಲ್ಲಿ ಕ್ರಿಕೆಟ್ ಶಿಬಿರದಲ್ಲಿ ತನ್ನ ಪ್ರತಿಭೆಯನ್ನು ನಿರೂಪಿಸಿದರು. ಇದಾದ ಬಳಿಕ ಪದೇ ಪದೇ ಗುಜರಾತ್ ನಲ್ಲಿ ಕ್ರಿಕೆಟ್ ಶಿಬಿರದವರು ಬುಮ್ರಾ ರವರು ಆಟವಾಡಲು ಕರೆಯುತ್ತಿದ್ದರು.

ಪ್ರತಿಯೊಂದು ಶಿಬಿರದಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತಿದ್ದ ಕಾರಣ, ಎಂಆರ್‌ಎಫ್ ಪೇಸ್ ಫೌಂಡೇಶನ್ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯು ತನ್ನ ಶಿಬಿರದಲ್ಲಿ ಭಾಗವಹಿಸುವಂತೆ ಬುಮ್ರಾ ರವರಿಗೆ ಅವಕಾಶ ನೀಡಿದರು. ಅಲ್ಲಿಯೂ ಉತ್ತಮ ಪ್ರದರ್ಶನ ನೀಡಿದ ಬಳಿಕ ನೇರವಾಗಿ ಗುಜರಾತ್ ಅಂಡರ್ -19 ಟೂರ್ನಿಗೆ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಿದರು. 2012 ರಲ್ಲಿ ಪುಣೆಯಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟಿ 20 ಚಾಂಪಿಯನ್‌ಶಿಪ್‌ಗೆ ಗುಜರಾತ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು. ತದ ನಂತರ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಯ್ಕೆಯಾದರು. ಮುಂದೆ ನಡೆದದ್ದು ಇತಿಹಾಸ. ನಿಮಗೆ ಅದು ತಿಳಿದಿದೆ.