ನಮಸ್ಕಾರ ಸ್ನೇಹಿತರೇ, ಇದೀಗ ಚೀನಾ ದೇಶದ ಯೋಜನೆ ಗುಟ್ಟಾಗಿ ಉಳಿದಿಲ್ಲ. ವಿಶ್ವದ ಆರ್ಥಿಕತೆಯು ಕೊರೊನ ವೈರಸ್ನಿಂದ ತತ್ತರಿಸಿರುವ ಸಂದರ್ಭದಲ್ಲಿ ತನಗೆ ಏನೂ ಸಂಬಂಧವಿಲ್ಲ ಎಂಬಂತೆ ವಿವಿಧ ರಾಷ್ಟ್ರಗಳಲ್ಲಿ ಹೂಡಿಕೆ ಆರಂಭಿಸಿದೆ.
ಈಗಾಗಲೇ ಆಫ್ರಿಕಾದ ಬಡ ದೇಶಗಳಲ್ಲಿ ಲಕ್ಷಾಂತರ ಕೋಟಿ ಹೂಡಿಕೆ ಮಾಡುವ ಮೂಲಕ ತನ್ನ ಪಾರುಪತ್ಯ ಮೆರೆದಿರುವ ಚೀನಾ ದೇಶವು ಯುರೋಪಿಯನ್ ರಾಷ್ಟ್ರಗಳಲ್ಲಿ ಹಾಗೂ ಭಾರತದಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳಲು, ಕೊರೊನ ವೈರಸ್ ನಿಂದ ತತ್ತರಿಸಿರುವ ಆರ್ಥಿಕತೆಯ ಲಾಭ ಪಡೆದುಕೊಳ್ಳಲು ಇನ್ನಿಲ್ಲದ ಸರ್ಕಸ್ ನಡೆಸುತ್ತಿತ್ತು. ಆದರೆ ಇದೀಗ ಭಾರತ ಸೇರಿದಂತೆ ಜರ್ಮನಿ, ಇಟಲಿ ಹಾಗೂ ವಿಶ್ವದ ಇನ್ನಿತರ ದೇಶಗಳು ಚೀನಾ ದೇಶವು ತಮ್ಮ ದೇಶದಲ್ಲಿ ಹೂಡಿಕೆ ಮಾಡುವುದನ್ನು ತಡೆಯಲು ವಿದೇಶಿ ಬಂಡವಾಳ ಹೂಡಿಕೆಯ ಕಾನೂನುಗಳನ್ನು ಕಠಿಣಗೊಳಿಸಿದ್ದಾರೆ.
ಭಾರತವೂ ಕೂಡ ಕೇವಲ ಎರಡು ದಿನಗಳ ಹಿಂದಷ್ಟೇ ನೇರವಾಗಿ ಚೀನಾ ಹೆಸರು ಹೇಳದೆ ಭಾರತದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಯಾವುದೇ ದೇಶಗಳಾದರೂ ಭಾರತದಲ್ಲಿ ಹೂಡಿಕೆ ಮಾಡಬೇಕು ಎಂದರೇ ಶರತ್ತು ಬದ್ಧ ಕಾನೂನು ವಿಧಿಸಿ ಕೇಂದ್ರ ಸರ್ಕಾರದ ಅನುಮತಿ ಪಡೆದುಕೊಂಡು ಹೂಡಿಕೆ ಮಾಡಬೇಕು ಎಂಬ ಕಾನೂನು ಜಾರಿ ಮಾಡಿತ್ತು. ಇದರಿಂದ ಇದೀಗ ಚೀನಾ ದೇಶದ ಯೋಜನೆಗೆ ಬ್ರೇಕ್ ಬಿದ್ದಿದ್ದು, ಮಾನವೀಯತೆ, ನೆರೆ ದೇಶಗಳ ಸಂಬಂಧ, ವಿಶ್ವ ವಾಣಿಜ್ಯ ಸಂಸ್ಥೆಯ ಕಾನೂನುಗಳು ಎಲ್ಲವೂ ಒಮ್ಮೆಲೆ ಚೀನಾ ದೇಶಕ್ಕೆ ನೆನಪಾಗಿ ಬಿಟ್ಟಿವೆ.
ಹೌದು ಇದೀಗ ಇದರ ಕುರಿತು ಮಾತನಾಡಿರುವ ಚೀನಾ ದೇಶದ ರಾಯಭಾರಿ ಕಚೇರಿ, ಭಾರತ ದೇಶವು ವಿದೇಶಿ ಬಂಡವಾಳ ಹೂಡಿಕೆಯ ಕಾನೂನುಗಳನ್ನು ಬದಲಾಯಿಸಿದ್ದು ಸರಿಯಲ್ಲ. ಇದು ಎರಡು ದೇಶಗಳ ಸಂಬಂಧಗಳು, ಉದಾರಿಕರಣ, ವ್ಯಾಪಾರ ಮತ್ತು ಹೂಡಿಕೆಯ ಅನುಕೂಲತೆಗೆ ವಿರುದ್ಧವಾಗಿದೆ. ಕಾನೂನಿನ ಮೂಲಕ ಅಡೆತಡೆಗಳನ್ನು ನಿವಾರಣೆ ಮಾಡುವ ಬದಲು ಹೆಚ್ಚುವರಿ ಅಡೆತಡೆಗಳನ್ನು ಮೋದಿ ಸರ್ಕಾರ ಪರಿಚಯಿಸಿದೆ, ಇದು ವಿಶ್ವ ವಾಣಿಜ್ಯ ಸಂಸ್ಥೆಯ ಕಾನೂನಿಗೆ ವಿರುದ್ಧವಾಗಿರುವುದಷ್ಟೇ ಅಲ್ಲದೇ G20 ಒಪ್ಪಂದದ ಪ್ರಕಾರ ಹೂಡಿಕೆ ಮುಕ್ತ, ನ್ಯಾಯಯುತ, ತಾರತಮ್ಯ ರಹಿತ ಮತ್ತು ಪಾರದರ್ಶಕ ವಾತಾವರಣ ಸಾಕಾರಗೊಳಿಸಲು ತೆಗೆದುಕೊಂಡ ನಿರ್ಧಾರಕ್ಕೆ ವಿರುದ್ಧವಾಗಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.