ಇದೀಗ ರಾಜಧಾನಿ ಬೆಂಗಳೂರಿನ ಟೌನ್ ಹಾಲ್ ಬಳಿ ನಡೆದ ಪೌರತ್ವ ತಿದ್ದು ಪಡಿ ಮಸೂದೆಯನ್ನು ಬೆಂಬಲಿಸಿ ನಡೆದ ಜಾಥಾ ಯಶಸ್ವಿಯಾಗಿ ಪೂರ್ಣಗೊಂಡಿದೆ. ಸಾವಿರಾರು ಜನರು ಮೋದಿ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿ ಟೌನ್ ಹಾಲ್ ನ ಮುಂದೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮೋದಿ ರವರ ಪರ ಘೋಷಣೆಗಳನ್ನು ಕೂಗುತ್ತ, ಪೌರತ್ವ ತಿದ್ದುಪಡಿ ಮಸೂದೆಯ ಕುರಿತು ವಿವರಣೆ ನೀಡಿ, ಅರಿವು ಮೂಡಿಸುವ ಪ್ರಯತ್ನ ಕೂಡ ಮಾಡಿದ್ದು ಗಮನ ಸೆಳೆಯಿತು.
ಇದೇ ಸಮಯದಲ್ಲಿ ಮಾತನಾಡಿದ ಯುವ ಸಂಸದ ತೇಜಸ್ವಿ ಸೂರ್ಯ ರವರು ಎಂದಿನಂತೆ ತಮ್ಮ ಮಾತುಗಳ ಮೂಲಕ ವಿಪಕ್ಷಗಳಿಗೆ ಬಾಣಗಳನ್ನು ಬಿಟ್ಟರು. ಕೆಲವೊಂದು ನೇರ ಕಠಿಣ ಮಾತುಗಳ ಮೂಲಕ ನರೇಂದ್ರ ಮೋದಿ ರವರ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿ ಮಾತನಾಡಿದರು. ಇದೇ ವೇಳೆಯಲ್ಲಿ ಸಚಿವ ಯು ಟಿ ಖಾದರ್ ರವರಿಗೆ ತಿರುಗೇಟನ್ನು ಕೂಡ ನೀಡಿದರು.ಇಲ್ಲಿ ಭಾಷಣವನ್ನು ಮಾಡಿದ ತೇಜಸ್ವಿ ಸೂರ್ಯ ರವರು, ನಾವು ಕೂಡ ಒಂದು ವೇಳೆ ಯು ಟಿ ಖಾದರ್ ರವರ ರೀತಿ ಪ್ರಚೋದನೆ ನೀಡುವಂತೆ ಮಾತನಾಡಿ ಜನರನ್ನು ಸೇರಿಸಿದರೇ, ಅವರು ಉಳಿಯುವುದಿಲ್ಲ ಎಂದು ಹೇಳಿದರು. ಮಾತನ್ನು ಮುಂದುವರೆಸಿದ ಸೂರ್ಯ ರವರು,
ಕಾಂಗ್ರೆಸ್ ಪಕ್ಷ ಮಸೂದೆಯ ಕುರಿತು ಸಾವಿನ ರಾಜಕೀಯ ಮಾಡುತ್ತಿದೆ, ಈ ಮಸೂದೆಯಿಂದ ಭಾರತೀಯ ಮುಸ್ಲಿಮರಿಗೆ ತೊಂದರೆ ಇಲ್ಲ. ಇದು ನೆರೆಯ ಮೂರು ದೇಶಗಳ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ನೀಡುವ ಕಾನೂನು. ಇದೇ ಕಾಯ್ದೆಯನ್ನು ಮನಮೋಹನ್ ಸಿಂಗ್ ರವರು ಜಾರಿಗೆ ತರುವಂತೆ ಭಾಷಣ ಕೂಡ ಮಾಡಿದ್ದರು. ಈ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಮಾಹಿತಿ ನೀಡದೇ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಎದೆ ಸೀಳಿದರೂ ಒಂದು ಅಕ್ಷರ ಬರದ, ಪಂಚರ್ ಹಾಕುವ ಅಂಗಡಿಯವರು ಪ್ರತಿಭಟನೆಯ ಹೆಸರಿನಲ್ಲಿ ಗಲಭೆ ನಡೆಸುತ್ತಿದ್ದಾರೆ ಎಂದರು. ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲದಿದ್ದರೂ ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಕಾಂಗ್ರೆಸ್ ಹಾಗೂ ಪ್ರತಿಭಟನೆ ಮಾಡುತ್ತಿರುವ ಇತರ ಸಂಘಟನೆಗಳ ದೇಶನಿಷ್ಠೆಯನ್ನು ಪ್ರಶ್ನಿಸುವ ಕಾಲ ಇದಾಗಿದೆ ಎಂದು ವಾಗ್ದಾಳಿ ನಡೆಸಿದರು.