ಕೊನೆಗೂ ಮೈತ್ರಿ ಸರ್ಕಾರ ಅಂತ್ಯಗೊಂಡ ಬಳಿಕ ಬಿಜೆಪಿ ಪಕ್ಷವೂ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿದೆ. ಸರ್ಕಾರ ರಚಿಸಿದ ನಂತರ ಎಲ್ಲರೂ ಅಂದುಕೊಂಡಂತೆ ಯಡಿಯೂರಪ್ಪ ನವರು ಮುಖ್ಯಮಂತ್ರಿಯಾದರು, ಆದರೆ ಯಡಿಯೂರಪ್ಪ ನವರ ರಾಜಕೀಯ ಜೀವನದ ನಂತರ ಮತ್ತೊಬ್ಬ ಪರ್ಯಾಯ ನಾಯಕ ಕರ್ನಾಟಕ ಬಿಜೆಪಿ ಪಕ್ಷದಲ್ಲಿ ನೆಲೆಯೂರಬೇಕು ಎಂಬ ಕಾರಣದಿಂದ ಬಿಜೆಪಿ ಪಕ್ಷದ ಹೈಕಮಾಂಡ್ ಈ ಬಾರಿ ಹಲವಾರು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿತ್ತು. ಮೂರು ಉಪ ಮುಖ್ಯ ಮಂತ್ರಿಗಳ ಹುದ್ದೆ ಸೇರಿದಂತೆ ಕೆಲವರಿಗೆ ಬಯಸದೇ ಬಂದ ಭಾಗ್ಯ ವೆಂಬಂತೆ ಇನ್ನು ಕೆಲವರಿಗೆ ಬಯಸಿದ್ದರೂ ಸಿಗದ ಭಾಗ್ಯ ವೆಂಬಂತೆ ಖಾತೆ ಹಂಚಿಕೆ ನಡೆದಿದೆ.
ಈ ಎಲ್ಲಾ ಕಠಿಣ ನಿರ್ಧಾರಗಳಿಂದ ಶಿಸ್ತಿನ ಪಕ್ಷ ಎಂದು ಎನಿಸಿಕೊಂಡಿದ್ದರೂ ಸಹ ಬಿಜೆಪಿ ಪಕ್ಷದಲ್ಲಿ ಹಲವಾರು ಭಿನ್ನಮತದ ಮಾತುಗಳು ಕೇಳಿಬಂದಿದ್ದವು. ಬಿಜೆಪಿ ಪಕ್ಷದ ಕೆಲವು ಹಿರಿಯ ನಾಯಕರನ್ನು ಕಡೆಗಣಿಸಿ ಖಾತೆಗಳನ್ನು ಹಂಚಲಾಗಿದೆ ಎಂಬ ಆರೋಪಗಳು ಬಿಜೆಪಿ ಪಕ್ಷದ ಹೈ ಕಮಾಂಡ್ ವಿರುದ್ಧ ಕೇಳಿಬಂದಿದ್ದವು. ಇನ್ನೂ ಕೆಲವು ಸಚಿವರು ತಮಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಕ್ಕಿಲ್ಲ ಎಂಬ ಕಾರಣಕ್ಕೆ ಮುನಿಸಿಕೊಂಡು ಹೈಕಮಾಂಡ್ನ ವಿರುದ್ಧ ಕೆಂಡ ಕಾರಿದ್ದರು. ಇದರಿಂದ ಸಾಮಾನ್ಯವಾಗಿಯೇ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಂಡಿರುವ ಬಿಎಸ್ ಯಡಿಯೂರಪ್ಪನವರಿಗೆ ಸರ್ಕಾರ ಮುಂದೆ ಹೇಗೆ ಎಂಬ ಚಿಂತೆ ಆರಂಭವಾಗಿತ್ತು, ಅಷ್ಟೇ ಅಲ್ಲದೆ ಈ ರೀತಿ ಇದ್ದರೆ ಹೇಗೆ ಕೆಲಸ ನಡೆಯುತ್ತದೆ ಎಂಬ ಆತಂಕದ ಮನೋಭಾವನೆ ಮೂಡಿತ್ತು.
ಇದೀಗ ಈ ಎಲ್ಲಾ ಭಿನ್ನಮತದ ಮಾತುಗಳಿಗೆ ಹಾಗೂ ಯಡಿಯೂರಪ್ಪನವರ ಚಿಂತೆಗೆ ಬ್ರೇಕ್ ಬಿದ್ದಿದೆ. ಯಾಕೆಂದರೆ ಬಿಜೆಪಿ ಪಕ್ಷದ ಚಾಣಕ್ಯ ಎಂದೇ ಖ್ಯಾತಿ ಪಡೆದು ಕೊಂಡಿರುವ ಅಮಿತ್ ಶಾ ರವರು ಇದೀಗ ಕರ್ನಾಟಕ ರಾಜಕೀಯದ ಅಖಾಡಕ್ಕೆ ಇಳಿದಿದ್ದಾರೆ. ಏಕಾ ಏಕಿ ಭಿನ್ನಮತ ನಾಯಕರ ಮೇಲೆ ಕಿಡಿಕಾರಿರುವ ಅಮಿತ್ ಶಾ ರವರು, ಯಾವುದೇ ಶಿಸ್ತು ಉಲ್ಲಂಘನೆ ಮಾಡುವ ಶಾಸಕ ಹಾಗೂ ಸಚಿವರಿಗೆ ರಾಜೀನಾಮೆ ನೀಡಿ ಹೊರ ಹೋಗಲು ಹೇಳಿ ಎಂಬ ಸಂದೇಶವನ್ನು ಅಮಿತ್ ಶಾ ರವರು ಇದೀಗ ಬಿಎಸ್ ಯಡಿಯೂರಪ್ಪ ನವರಿಗೆ ರವಾನೆ ಮಾಡಿದ್ದಾರೆ. ತಮ್ಮ ಅತೃಪ್ತಿಯನ್ನು ಹೊರಹಾಕುವ ಮೂಲಕ ಪಕ್ಷಕ್ಕೆ ಮುಜುಗರ ಉಂಟು ಮಾಡುವ ಅಥವಾ ಹೈಕಮಾಂಡ್ ನಿರ್ಧಾರವನ್ನು ಪ್ರಶ್ನೆ ಮಾಡುವ ನಾಯಕರು ನಮಗೆ ಬೇಕಾಗಿಲ್ಲ ಎಂಬ ಮಾತು ಬಿಜೆಪಿ ಪಕ್ಷದ ವರಿಷ್ಠರಿಂದ ಕೇಳಿಬಂದಿದೆ.
ಈ ಆದೇಶ ಬಿಎಸ್ ಯಡಿಯೂರಪ್ಪ ನವರನ್ನು ತಲುಪುತ್ತಿದ್ದಂತೆ ಭಿನ್ನಮತೀಯ ಶಾಸಕರು ಹಾಗೂ ಸಚಿವರು ತೆಪ್ಪಗಾಗಿದ್ದಾರೆ. ಇದರಿಂದ ಯಡಿಯೂರಪ್ಪ ನವರು ಫುಲ್ ಖುಷ್ ಆಗಿದ್ದು, ಖಾತೆ ಹಂಚಿಕೆಯ ನಂತರ ರಾಜ್ಯ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ನಡೆಯುತ್ತದೆ ಎಂಬ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಅಷ್ಟೇ ಅಲ್ಲದೆ, ಈ ಮೂವರು ಉಪ ಮುಖ್ಯಮಂತ್ರಿಗಳು ಸೇರಿದಂತೆ ಇನ್ನುಳಿದ ಸಚಿವರಿಂದ ಹಾಗೂ ಶಾಸಕರಿಂದ ಉತ್ತಮ ಆಡಳಿತವನ್ನು ಎದುರು ನೋಡುತ್ತಿರುವುದಾಗಿ ಹೈಕಮಾಂಡ್ ತಿಳಿಸಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಮುಂದಾಲೋಚನೆ ಮಾಡಿ ಯಡಿಯೂರಪ್ಪ ನವರ ಪರ್ಯಾಯ ನಾಯಕರನ್ನು ಬೆಳೆಸುವ ಅಮಿತ್ ಶಾ ಯೋಜನೆಗೆ ಇದೀಗ ಯಾವುದೇ ಅಡೆ ತಡೆ ಇಲ್ಲ ಎಂಬಂತಾಗಿದೆ. ಯಡಿಯೂರಪ್ಪ ನವರು ರಾಜಕೀಯ ನಿವೃತ್ತಿ ಗೊಂಡ ನಂತರ ಬಿಜೆಪಿ ಪಕ್ಷ ಕರ್ನಾಟಕದಲ್ಲಿ ನೆಲೆಯೂರಬೇಕು ಎಂದುಕೊಂಡರೆ ಪರ್ಯಾಯ ನಾಯಕತ್ವ ಅತ್ಯಗತ್ಯ ಹೈ ಕಮಾಂಡ್ ಅರ್ಥ ಮಾಡಿಕೊಂಡಿದೆ.