ನಮಸ್ಕಾರ ಸ್ನೇಹಿತರೇ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಗಳಿಕೆ ಕೇವಲ 7 ದಿನಗಳಲ್ಲಿ 106 ಕೋಟಿಗೂ ಹೆಚ್ಚು. ಆದ್ರೆ ಹಣಕ್ಕಿಂತ ಇದು ಕೋಟಿ ಕೋಟಿ ಜನರ ಮನ ತಟ್ಟಿದೆ. ಹಿಂದುಗಳೆಲ್ಲರನ್ನೂ ಒಗ್ಗೂಡಿ ಮತ್ತೆ ಅನ್ಯಾಯದ ವಿರುದ್ಧ ಮಾತಾಡುವ ಮಟ್ಟಕ್ಕೆ ಈ ಸಿನಿಮಾ ಜನರ ಮೇಲೆ ಪ್ರಭಾವ ಬೀರಿದೆ. ಇದಕ್ಕೆ ಕಾರಣ ದಿ ಕಾಶ್ಮೀರ್ ಫೈಲ್ಸ್ ಯಾವುದೇ ಕಾಲ್ಪನಿಕ ಕಥೆಯಲ್ಲ, ಇದರಲ್ಲಿರುವುದು ಅರ್ಧ ಸತ್ಯವಲ್ಲ. ಸಂಪೂರ್ಣ ಕಾಶ್ಮೀರಿ ಪಂಡಿತರ ನೋವಿನ ಕಥೆ ವ್ಯಥೆ!
ಹಿಂದಿ ಭಾಷೆಯಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ದೇಶದಾದ್ಯಂತ ಬೆಂಬಲ ಸಿಕ್ಕಿದೆ. ರಾಜ್ಯದಲ್ಲಂತೂ ಹಲವು ಕಡೆ ಉಚಿತ ಪ್ರದರ್ಶನವನ್ನೂ ನಡೆಸಲಾಗುತ್ತಿದೆ. ಈ ಚಿತ್ರ ಕಾಶ್ಮೀರಿ ಪಂಡಿತರ ಹತ್ಯಾಕಾಂಡವನ್ನು ಹೇಳುತ್ತದೆ. 32 ವರ್ಷಗಳ ಹಿಂದೆ ನಡೆದ ಕಾಶ್ಮೀರಿ ಪಂಡಿತರ ನರಮೇಧದ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಹಾಗಾಗಿ ಕನ್ನಡದ ವೀಕ್ಷಕರಿಗೂ ಈ ಸಿನಿಮಾದ ಸಂದೇಶ ತಲುಪಿಸಬೇಕು, ಹಾಗಾಗಿ ಕನ್ನಡಕ್ಕೆ ಈ ಚಿತ್ರವನ್ನು ಡಬ್ಬಿಂಗ್ ಮಾಡಬೇಕು ಎಂದು ರಾಜ್ಯ ಬಿಜೆಪಿ ಚಿಂತನೆ ನಡೆಸಿದೆ.
ವಿಧಾನಸಭೆ ಹಾಗೂ ಪರಿಷತ್ ಸಚಿವಾಲಯದಿಂದಲೂ ಶಾಸಕರಿಗೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಪ್ರದರ್ಶನ ವ್ಯವಸ್ಥೆ ಮಾಡಲಾಗಿತ್ತು. ಹಿಂದಿ ಭಾಷೆಯಲ್ಲಿ ಇರುವ ಈ ಸಿನಿಮಾವನ್ನು ಇದೀಗ ಇಡೀ ಕರ್ನಾಟಕ ಜನತೆಗೆ ಕನ್ನಡದಲ್ಲಿಯೇ ತೋರಿಸಬೇಕು ಎಂಬುದು ಬಿಜೆಪಿಯ ಉದ್ದೇಶ. ಕನ್ನಡಕ್ಕೆ ಡಬ್ಬಿಂಗ್ ಮಾಡಿ ಪ್ರದರ್ಶನ ಮಾಡುವ ಬಗ್ಗೆ ಆಪ್ತ ಸಚಿವರ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಚರ್ಚೆ ಮಾಡಿದ್ದಾರೆ ಎಂಡು ವರದಿಯಾಗಿದೆ. ಹಾಗಾಗಿ ಶೀಘ್ರದಲ್ಲೇ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕನ್ನಡಕ್ಕೆ ಡಬ್ಬಿಂಗ್ ಆಗಿ ಪ್ರತಿಯೊಬ್ಬ ಕನ್ನಡಿಗನೂ ನೋಡುವಂತೆ ಮಾಡುವ ಸಾಧ್ಯತೆಗಳಿವೆ.
ಇನ್ನು ‘ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕನ್ನಡಕ್ಕೆ ಡಬ್ಬಿಂಗ್ ಆಗಬೇಕು’ ಎಂದು ವಿಧಾನಸೌಧದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಕೂಡ ವಾದಿಸಿದ್ದಾರೆ. ‘ಈಗ ಸಿನಿಮಾ ಹಿಂದಿಯಲ್ಲಿ ಬಿಡುಗಡೆ ಆಗಿದೆ, ಕನ್ನಡಕ್ಕೂ ಡಬ್ಬಿಂಗ್ ಮಾಡಬೇಕು. ಕನ್ನಡದಲ್ಲಿ ಬಂದ್ರೆ ಹಿಂದಿ ಬಾರದವರಿಗೂ ಅರ್ಥ ಆಗುತ್ತದೆ. ಕನ್ನಡದಲ್ಲಿ ಬಂದ್ರೆ ಒಳ್ಳೆಯದು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಕೂಡ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಕನ್ನಡಕ್ಕೆ ಡಬ್ಬಿಂಗ್ ಮಾಡಬೇಕು. ಈಗಾಗಲೇ ಈ ಬಗ್ಗೆ ಚರ್ಚೆ ಮಾಡಿದ್ದೇವೆ. ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮೊಬೈಲ್ ನಂಬರ್ ಕಲೆ ಹಾಕಿದ್ದೇನೆ. ಡಬ್ಬಿಂಗ್ಗೆ ಅವರು ಒಪ್ಪಿದರೆ ಹಣ ಸಂಗ್ರಹಿಸಿ ಡಬ್ಬಿಂಗ್ ಮಾಡುತ್ತೇವೆ’ ಎಂದು ತಿಳಿಸಿದ್ದಾರೆ.