ಭಾರತದ ಗೃಹ ಇಲಾಖೆಯು ಇತಿಹಾಸದಲ್ಲಿ ಕಾಣಸಿಗದಂತಹ ತ್ವರಿತ ಗತಿಯಲ್ಲಿ ಎಲ್ಲಾ ನಿರ್ಣಯಗಳನ್ನು ತೆಗೆದುಕೊಳ್ಳುವ ನಿರ್ಧಾರ ಮಾಡಿದಂತೆ ಕಾಣುತ್ತಿದೆ. ಸತತ ಒಂದರಮೇಲೊಂದು ಸಭೆಗಳನ್ನು ನಡೆಸುತ್ತಿರುವ ಅಮಿತ್ ಶಾ ರವರು ಗೃಹ ಸಚಿವಾಲಯದ ಪ್ರತಿಯೊಂದು ಜವಾಬ್ದಾರಿಗೆ ವಿಶೇಷ ಸಭೆಗಳನ್ನು ನಡೆಸಿ, ಅಧಿಕಾರಿಗಳ ಜೊತೆ ಸಂಪೂರ್ಣವಾಗಿ ಚರ್ಚೆ ಮಾಡಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಗೃಹ ಸಚಿವಾಲಯದಲ್ಲಿ ಟಿಕಾಣಿ ನೋಡಿ, ಊಟಕ್ಕೆ ಸಹ ಮನೆಗೆ ಹೋಗದೆ ಕಾರ್ಯನಿರ್ವಹಿಸುತ್ತಿರುವ ಅಮಿತ್ ಶಾ ರವರು ಇದೀಗ, ಅಧಿಕಾರ ವಹಿಸಿಕೊಂಡ ಕೆಲವೇ ಕೆಲವು ದಿನಗಳಲ್ಲಿ ನಿರೀಕ್ಷೆಯಂತೆ ಮೊದಲು ಜಮ್ಮು-ಕಾಶ್ಮೀರದ ಭದ್ರತೆಯ ಮೇಲೆ ಕಣ್ಣಿಟ್ಟಿದ್ದಾರೆ.
ಮೊದಲಿನಿಂದಲೂ ಜಮ್ಮು ಹಾಗೂ ಕಾಶ್ಮೀರದ ವಿಷಯದಲ್ಲಿ ಸ್ಪಷ್ಟ ನಿಲುವನ್ನು ಹೊಂದಿರುವ ಬಿಜೆಪಿ ಪಕ್ಷವು ಕಳೆದ ಬಾರಿ ತನ್ನ ಮೈತ್ರಿ ಪಕ್ಷದೊಂದಿಗೆ ತನ್ನ ಸರ್ಕಾರವನ್ನು ತಾನೇ ಉಳಿಸಿಕೊಂಡು, ಕೂಡಲೇ ಚುನಾವಣೆಗೆ ಹೋಗದೇ ರಾಷ್ಟ್ರಪತಿ ಆಡಳಿತೆಯನ್ನು ಜಮ್ಮು ಹಾಗೂ ಕಾಶ್ಮೀರದಲ್ಲಿ ಜಾರಿಗೆ ತಂದು, ಉಗ್ರರ ದಮನಕ್ಕೆ ನಾಂದಿ ಹಾಡಿದ್ದರು. ತದನಂತರ ನಡೆದದ್ದೆಲ್ಲವೂ ಇತಿಹಾಸ, ಉಗ್ರರಿಗೆ ಅಕ್ಷರಸಹ ದುಃಸ್ವಪ್ನವಾಗಿ ಕಾಡುತ್ತಿರುವ ಭಾರತೀಯ ಸೈನಿಕರು ಐವತ್ತಕ್ಕೂ ಹೆಚ್ಚು ಎನ್ಕೌಂಟರ್ ಗಳ ಮೂಲಕ ನೂರಕ್ಕೂ ಹೆಚ್ಚು ಪ್ರಮುಖ ಉಪಯೋಗ ದಮನ ಮಾಡಿದ್ದಾರೆ. ಮೊದಲಿನಿಂದಲೂ ರಾಷ್ಟ್ರದ ಭದ್ರತೆಯ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳದ, ಮೋದಿ ನೇತೃತ್ವದ ಸರ್ಕಾರವು ಇದೀಗ ಮತ್ತೊಂದು ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ.
ಉಗ್ರರಿಗೆ ಬೆಂಬಲ ನೀಡಲು ಸ್ಥಳೀಯ ನಿರುದ್ಯೋಗಿ ಯುವಕರಿಗೆ ನೀಡುತ್ತಿದ್ದ ಹಣದ ಹರಿವನ್ನು ತಪ್ಪಿಸಲು ಈಗಾಗಲೇ ಕೇಂದ್ರ ಸರ್ಕಾರವು ಹಲವಾರು ಪ್ರಮುಖ ಪ್ರತ್ಯೇಕ ವಾದಿಗಳನ್ನು ಬಂಧಿಸಿ ಹಿಂಸಾಚಾರದ ಮಟ್ಟವನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ. ಆದರೆ ಅಳಿದುಳಿದ ಪಾಕ್ ಬೆಂಬಲಿಗರು, ಸ್ಥಳೀಯ ಜನತೆ ಹಾಗೂ ಉಗ್ರರು ಇನ್ನು ಕಾಶ್ಮೀರದಲ್ಲಿ ಕಲ್ಲು ತೂರಾಟ, ಸೇನೆಯ ಮೇಲೆ ದಾಳಿ ಹೀಗೆ ಹಲವಾರು ರೀತಿಯಲ್ಲಿ ಭಾರತದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಇದನ್ನು ಹತ್ತಿಕ್ಕಲು ಕೇಂದ್ರ ಸರ್ಕಾರವು ಇದೀಗ ಪ್ರತ್ಯೇಕ ತಂಡವನ್ನು ರಚಿಸಿದೆ. ಈ ತಂಡವನ್ನು ಖುದ್ದು ಅಮಿತ್ ಶಾ ರವರು, ನಿರ್ವಹಣೆ ಮಾಡಲಿದ್ದು ಉಗ್ರರ ಹೆಡೆಮುರಿ ಖಚಿತ ಎಂದೇ ಭಾವಿಸಲಾಗುತ್ತಿದೆ.
ಹೌದು, ಭಯೋತ್ಪಾದಕ ಮೇಲ್ವಿಚಾರಕ ಗುಂಪು ಎಂಬ ಹೆಸರಿನೊಂದಿಗೆ ಹೊಸ ತಂಡವನ್ನು ರಚಿಸಿರುವ ಗೃಹಸಚಿವಾಲಯವು, ಈ ತಂಡದಲ್ಲಿ ಮಾಹಿತಿ ಬ್ಯೂರೋ (ಐಬಿ), ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ), ಕೇಂದ್ರ ತನಿಖಾ ದಳ (ಸಿಬಿಐ), ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ದ ಪ್ರತಿನಿಧಿಗಳು ರಾಜ್ಯದ ಪ್ರತಿನಿಧಿ ಒಳಗೊಂಡಿರುತ್ತಾರೆ. ಪ್ರತಿವಾರಕ್ಕೊಮ್ಮೆ ಭಯೋತ್ಪಾದಕ ಚಟುವಟಿಕೆ ಮತ್ತು ಭಯೋತ್ಪಾದಕ ಗುಂಪುಗಳ ಹಣದ ಹರಿವನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ, ಅಷ್ಟೇ ಅಲ್ಲದೆ ಭಯೋತ್ಪಾದನೆ ಹಾಗೂ ಭಯೋತ್ಪಾದಕ ಹಣಕಾಸು ಸಂಬಂಧಿತ ಪ್ರಕರಣಗಳನ್ನು ತ್ವರಿತ ಗತಿಯಲ್ಲಿ ಕ್ರಮಕೈಗೊಂಡು ಕಾಶ್ಮೀರವನ್ನು ಉಗ್ರ ಮುಕ್ತ ರಾಜ್ಯ ಮಾಡುವುದು ಈ ತಂಡದ ಪ್ರಮುಖ ಗುರಿಯಾಗಲಿದೆ. ಈ ತಂಡಕ್ಕೆ ಸಂಪೂರ್ಣ ಯಶಸ್ಸು ಸಿಗಲಿ ಎಂದು ಹಾರೈಸುತ್ತೇವೆ.